ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ 6 ರಿಂದ ರಾತ್ರಿ 10ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಮೈನಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ.
ಪ್ರತಿದಿನ ರಾತ್ರಿ 10.30 ಕ್ಕೆ ಪ್ರಸಾರವಾಗುತ್ತಿರುವ ಹಾಸ್ಯಧಾರಾವಾಹಿ `ಗೌರಿಪುರದ ಗಯ್ಯಾಳಿಗಳು` ಇತ್ತೀಚೆಗೆ 1000 ಸಂಚಿಕೆಗಳನ್ನು ಪೂರೈಸಿತು. ಈ ಸಂಭ್ರಮವನ್ನು ಸೆಟ್ನಲ್ಲಿ ಕೇಕ್ ಕತ್ತರಿಸುವುದರ ಮೂಲಕ ಆಚರಿಸಲಾಯಿತು. ಉದಯ ಟಿವಿಯ ಎಲ್ಲ ಧಾರಾವಾಹಿಗಳ ಕಲಾವಿದರೂ ಗಯ್ಯಾಳಿ ತಂಡಕ್ಕೆ ಶುಭಕೋರಿದರು. ಈ ಸಂದರ್ಭದಲ್ಲಿ ಖ್ಯಾತ ಮಿಮಿಕ್ರಿ ಕಲಾವಿದ ಮಂಜು ಅವರು ಅತಿಥಿ ಪಾತ್ರದಲ್ಲಿ ನಟಿಸಿದ ವಿಶೇಷ ಸಂಚಿಕೆಗಳನ್ನು ಚಿತ್ರೀಕರಿಸಲಾಯಿತು.
ಸಾವಿರ ಸಂಚಿಕೆಗಳನ್ನು ಪೂರೈಸುವುದು ಒಂದು ಮೈಲಿಗಲ್ಲು. ಇದು ಧಾರಾವಾಹಿಯ ಜನಪ್ರಿಯತೆಗೆ ಸಾಕ್ಷಿ. ಮುಂದೆ ಇನ್ನೂ ಹೆಚ್ಚಿನ, ಟ್ರೆಂಡಿಗೆ ತಕ್ಕಂಥ ಹಾಸ್ಯಮಯ ಸಂಚಿಕೆಗಳನ್ನು ಚಿತ್ರೀಕರಿಸುವುದು ನಮ್ಮ ಜವಾಬ್ದಾರಿ ಹಾಗೂ ಸವಾಲೂ ಹೌದುʼ ಎಂಬುದು ನಿರ್ಮಾಪಕ ಸಾಧುಕೋಕಿಲ ಅವರ ನುಡಿ.
ಡಿಜಿಟಲ್ ಮಾಧ್ಯಮದಲ್ಲಿ ಎಗ್ಗಿಲ್ಲದೇ ಹರಿದುಬರುತ್ತಿರುವ ತರಹೇವಾರಿ ಹಾಸ್ಯ ವಿಡಿಯೋಗಳ ನಡುವೆ ಸದಭಿರುಚಿಯ ಹಾಸ್ಯ ಮೂಲೆಗುಂಪಾಗುವ ಅಪಾಯವಿದೆ. ಆದರೂ ಗೌರಿಪುರದ ಗಯ್ಯಾಳಿಗಳ ಜನಪ್ರಿಯತೆ ವೀಕ್ಷಕರು ಒಳ್ಳೆಯ ಹಾಸ್ಯವನ್ನು ಯಾವತ್ತಿದ್ದರೂ ಇಷ್ಟಪಡುತ್ತಾರೆ ಎಂಬುದಕ್ಕೆ ನಿದರ್ಶನʼ ಎನ್ನುತ್ತಾರೆ ನಿರ್ದೇಶಕ ಕೈಲಾಶ್ ಮಳವಳ್ಳಿ.
ಸದಭಿರುಚಿಗೆ ಇನ್ನೊಂದು ಹೆಸರು ಉದಯ ಟಿವಿ. ಹಾಸ್ಯ ಕಂಟೆಂಟ್ ಅನ್ನು ಯಾವತ್ತೂ ಸದಭಿರುಚಿಯ ಚೌಕಟ್ಟಿನಲ್ಲೇ ನೀಡಬೇಕು. ಅದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಉದಯ ಟಿವಿ ಕಾರ್ಯಕ್ರಮ ಮುಖ್ಯಸ್ಥರು.
ಹೆಸರಾಂತ ಹಾಸ್ಯಕಲಾವಿದರಾದ ಸಾಧುಕೋಕಿಲ ಅವರು ತಮ್ಮ ಸುರಾಗ್ ಪ್ರೊಡಕ್ಷನ್ಸ್ ಅಡಿ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಚಿತ್ರಕತೆ-ಸಂಭಾಷಣೆ- ದಕ್ಷಿಣಾಮೂರ್ತಿಯವರದು. ಛಾಯಾಗ್ರಹಣ- ಅಭಿ, ಸಂಕಲನ-ಮಹೇಶ್.
ವಿಕಾಸ್, ನವ್ಯ, ದೀಪಿಕಾ, ದಾನಪ್ಪ, ವೀಣಾ, ಹುಬ್ಳಿ ಮಂಜುಳಾ, ದೀಪಾ, ರಂಜಿತ್ ಮುಂತಾದವರ ತಾರಾಗಣವಿರುವ ಈ ಧಾರಾವಾಹಿಯಲ್ಲಿ ಹಿರಿಯ ಹಾಸ್ಯಕಲಾವಿದರಾದ ಉಮೇಶ್, ರೇಖಾದಾಸ್, ಮಿಮಿಕ್ರಿ ಗೋಪಿ, ಜಯಮ್ಮ, ನಾಗರಾಜ ಕೋಟೆ, ಮಿಮಿಕ್ರಿ ಮಂಜು, ಲೋಕೇಶ್ ಬಸವಟ್ಟಿ, ರವಿತೇಜ ಚಿತ್ರನಟಿಯರಾದ ಚಂದನಾ, ರಚನಾ ದಶರಥ ಮತ್ತಿತರರು ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
`ಗೌರಿಪುರದ ಗಯ್ಯಾಳಿಗಳು` ಪ್ರತಿದಿನ ರಾತ್ರಿ 10.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಭಾನುವಾರವೂ ವೀಕ್ಷಕರನ್ನು ರಂಜಿಸುತ್ತಿದೆ.